ಗಿಡ ನೆಡುವ ಕಾರ್ಯಕ್ರಮ ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗಿರದೆ ನೆಟ್ಟ ಗಿಡವನ್ನು ಎರಡು ವರ್ಷಗಳಷ್ಟು ಕಾಲ ಗೊಬ್ಬರ ಹಾಗೂ ನೀರು ಹಾಕಿ ಪೋಷಿಸಿದಾಗ ಮಾತ್ರ ಅದು ಮರವಾಗಿ ಬೆಳೆಯಲು ಸಾಧ್ಯ ಎಂದು ಪರಿಸರ ಸಂರಕ್ಷಕ ಜೀತ್ ಮಿಲನ್ ರೋಚ್ ಅಭಿಪ್ರಾಯಪಟ್ಟರು. ಇವರು ಆಗಸ್ಟ್ 10ರಂದು ರೇಡಿಯೋ ಸಾರಂಗ್ 107.8 ಎಫ್. ಎಂ. ಆಯೋಜಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವನಮಹೋತ್ಸವದ ದಿನಾಚರಣೆ ದಿನ ಕೇವಲ ಗಿಡ ನೆಟ್ಟು ಹೋಗದೆ ಅದರ ಕಾಳಜಿ ವಹಿಸಿದಾಗ ಮಾತ್ರ ಆಚರಣೆ ಅರ್ಥಪೂರ್ಣವಾಗಲು ಸಾಧ್ಯ. ಸ್ಮಶಾನದಲ್ಲಿ ಗಿಡ ನೆಡುವ ಸಂದರ್ಭದಲ್ಲಿ ಅಲ್ಲಲ್ಲಿ ನೀರಿನ ಒರತೆ ಕಾಣುತ್ತಿತ್ತು. ಅದನ್ನು ಇಂಗಿಸಲು ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಿಸಿ, ಜೆ. ಸಿ. ಬಿ. ಸಹಾಯದಿಂದ ಗುಂಡಿಗಳನ್ನು ನಿರ್ಮಿಸಿ ನೀರು ಇಂಗುವಂತೆ ಮಾಡಿದ ಕೆಲಸದಿಂದ 16 ಕೋಟಿ ಲೀಟರ್ ನೀರು ಉಳಿತಾಯವಾಗುತ್ತಿದ್ದು ಇದು ತುಂಬಾ ತೃಪ್ತಿ ಕೊಟ್ಟಿದೆ ಎಂದು ಹೇಳಿದರು.
ಅಲ್ಲದೆ, ಸ್ಥಳೀಯ ಹವಾಮಾನಕ್ಕೆ ತಕ್ಕ ಗಿಡಗಳನ್ನು, ಹಾಗೂ ಗಾಳಿ ಬೆಳಕು ಬೀಳುವಂತೆ 3 ಅಡಿ ಆಳದ ಗುಂಡಿಗಳನ್ನು ನಿರ್ಮಿಸಿ ಗಿಡ ನೆಡುವುದು ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಜೀತ್ ಮಿಲನ್ ಇವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಸ್ಮಶಾನಗಳಲ್ಲಿ, ಸರಕಾರಿ ಜಾಗಗಳಲ್ಲಿ ಹಸಿರೀಕರಣದ ಯೋಜನೆಯನ್ನು ಕಾರ್ಯಗತ ಮಾಡಿಕೊಂಡು ಪರಿಸರ ಸಂರಕ್ಷಣೆಯನ್ನು ಮಾಡಿಕೊಂಡು ಬಂದವರು. ಜೀವನದಲ್ಲಿ ಖಿನ್ನತೆಯಿಂದ ಬಳಲಿದಾಗ ಅದರಿಂದ ಹೊರಬರಲು ಗಿಡ ನೆಡುವ ಯೋಜನೆ ಕೈಗೆತ್ತಿಕೊಂಡು ಇಂದು ಲಕ್ಷಕ್ಕಿಂತಲೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲ ಕಸ ವಿಲೇವಾರಿ ಯೋಜನೆಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಲವಾರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್